ಹಮ್ ದಿಲ್ ದೇ ಚುಕೆ ಸನಮ್ (ಕನ್ನಡ: ಪ್ರಿಯೆ, ನಾನು ನನ್ನ ಹೃದಯವನ್ನು ಕೊಟ್ಟುಬಿಟ್ಟಿದ್ದೇನೆ) ೧೯೯೯ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ಸಂಜಯ್ ಲೀಲಾ ಭಂಸಾಲಿ ನಿರ್ದೇಸಿದ್ದಾರೆ. ಅಂತರರಾಷ್ಟ್ರೀಯವಾಗಿ ಇದನ್ನು ಸ್ಟ್ರೇಟ್ ಫ಼್ರಾಮ್ ದ ಹಾರ್ಟ್ ಎಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪಾತ್ರಗಳಲ್ಲಿ ಸಲ್ಮಾನ್‌ ಖಾನ್‌, ಅಜಯ್ ದೇವ್ ಗನ್ ಮತ್ತು ಐಶ್ವರ್ಯಾ ರೈ ನಟಿಸಿದ್ದಾರೆ. ಈ ಚಿತ್ರವು ಮೈತ್ರೇಯಿ ದೇವಿಯವರ ಬಂಗಾಳಿ ಕಾದಂಬರಿ ನಾ ಹನ್ಯತೆಯ ಸಡಿಲ ರೂಪಾಂತರ ಎಂದು ವರ್ಣಿಸಲಾಗಿದೆ ಮತ್ತು ಒಂದು ಪ್ರೇಮ ತ್ರಿಕೋನದ ಮೇಲೆ ಆಧಾರಿತವಾಗಿದೆ ಆದರೆ ಚಿತ್ರವು ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ. ಈ ಚಿತ್ರದ ವಿಷಯವು ರಾಷ್ಟ್ರೀಯ ಶಾಯರ್ ಝವೇರ್‌ಚಂದ್ ಮೇಘಾನಿಯವರ ನಾಟಕ "ಶೇತಲ್ ನೇ ಕಥೆ" ಮೇಲೆ ಆಧಾರಿತವಾಗಿದೆ. ಸಂಜಯ್ ಲೀಲಾ ಭನ್ಸಾಲಿ ಮೇಘಾನಿಯವರ ದೊಡ್ಡ ಅಭಿಮಾನಿಯಾಗಿದ್ದಾರೆ ಮತ್ತು ಅದನ್ನು ಅನೇಕ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಇದನ್ನು ಗುಜರಾತ್-ರಾಜಸ್ಥಾನ ಗಡಿಯಾದ್ಯಂತ, ಜೊತೆಗೆ ಹಂಗೇರಿಯಲ್ಲಿ ಚಿತ್ರೀಕರಿಸಲಾಯಿತು. ಈ ಚಿತ್ರವನ್ನು ಪ್ರಪ್ರಥಮವಾಗಿ ೧೯೯೯ರ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಇದನ್ನು ಬಂಗಾಳಿಯಲ್ಲಿ ೨೦೦೯ರಲ್ಲಿ ನೀಲ್ ಆಕಾಶೇರ್ ಚಾಂದನಿ ಎಂದು ರೀಮೇಕ್ ಮಾಡಲಾಯಿತು. ಹಮ್ ದಿಲ್ ದೇ ಚುಕೆ ಸನಮ್ ೪೫ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಖಾನ್ ಮತ್ತು ದೇವ್‍ಗನ್‍ರಿಗೆ ಅತ್ಯುತ್ತಮ ನಟರ ನಾಮನಿರ್ದೇಶನ ಸೇರಿದಂತೆ ಅತಿ ಹೆಚ್ಚು ೧೭ ನಾಮನಿರ್ದೇಶನಗಳನ್ನು ಪಡೆಯಿತು ಮತ್ತು ಅತ್ಯುತ್ತಮ ಚಲನಚಿತ್ರ, ಭನ್ಸಾಲಿಯವರಿಗೆ ಅತ್ಯುತ್ತಮ ನಿರ್ದೇಶಕ, ರೈಯವರಿಗೆ ಅತ್ಯುತ್ತಮ ನಟಿ ಮತ್ತು ಉದಿತ್ ನಾರಾಯಣ್‍ರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಸೇರಿದಂತೆ ೭ ಪ್ರಶಸ್ತಿಗಳನ್ನು ಗೆದ್ದಿತು. == ಕಥಾವಸ್ತು == ನಂದಿನಿ (ಐಶ್ವರ್ಯಾ ರೈ ಬಚ್ಚನ್) ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಖ್ಯಾತ ಪ್ರತಿಪಾದಕನಾದ ಪಂಡಿತ್ ದರ್ಬಾರ್‌ನ (ವಿಕ್ರಮ್ ಗೋಖಲೆ) ಮಗಳಾಗಿರುತ್ತಾಳೆ. ಸಮೀರ್ (ಸಲ್ಮಾನ್ ಖಾನ್) ಎಂಬ ಹೆಸರಿನ ಯುವಕನು ಪಂಡಿತ್‍ರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಜಟಿಲತೆಗಳನ್ನು ಅರಿತುಕೊಳ್ಳಲು ದರ್ಬಾರ್ ಕುಟುಂಬದೊಂದಿಗೆ ಇರಲು ಆಗಮಿಸುವನು ಎಂದು ಘೋಷಿಸಲಾಗುತ್ತದೆ. ಅವನನ್ನು ನಂದಿನಿಯ ಕೋಣೆಯಲ್ಲಿ ಇಳಿಸಲಾಗುತ್ತದೆ. ಈ ಕಾರಣದಿಂದ ಅವಳು ಸಮೀರ್‌ನನ್ನು ಇಷ್ಟಪಡುವುದಿಲ್ಲ. ಮೊದಮೊದಲು ಇಬ್ಬರೂ ಒಬ್ಬರನ್ನೊಬ್ಬರು ಅಣುಕಿಸುತ್ತಾರೆ ಮತ್ತು ಕೀಟಲೆ ಮಾಡುತ್ತಾರೆ, ಆದರೆ ಶೀಘ್ರದಲ್ಲೇ ಅವರು ಗಾಢವಾಗಿ ಪ್ರೀತಿಸತೊಡಗುತ್ತಾರೆ. ಇಬ್ಬರೂ ಮದುವೆಗಳು ಮತ್ತು ಹಬ್ಬಗಳು ಸೇರಿದಂತೆ, ಹಲವಾರು ಕೌಟುಂಬಿಕ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಣಯದ ಕ್ಷಣಗಳನ್ನು ಕಳೆಯುತ್ತಾರೆ. ಒಂದು ದಿನ, ಆ ಜೋಡಿಯು ತಮ್ಮ ಮದುವೆಯ ಪ್ರತಿಜ್ಞೆಗಳ ಪೂರ್ವಾಭ್ಯಾಸ ನಡೆಸುತ್ತಿರುವಾಗ ಪಂಡಿತನ ಕೈಗೆ ಸಿಕ್ಕಿಬೀಳುತ್ತಾರೆ. ಅವನು ಮೊದಲೇ ನಂದಿನಿಯ ವಿವಾಹವನ್ನು ವನ್‍ರಾಜ್‍ನೊಂದಿಗೆ (ಅಜಯ್ ದೇವ್‍ಗನ್) ಯೋಜಿಸಿದ್ದಿದ್ದರಿಂದ ಅವನು ಕೋಪಗೊಳ್ಳುತ್ತಾನೆ. ವನ್‍ರಾಜ್ ತನ್ನ ಸೋದರಸಂಬಂಧಿ ಅನುಳ (ಶೀಬಾ ಚಡ್ಢಾ) ವಿವಾಹದ ವೇಳೆ ಅವಳನ್ನು ಪ್ರೀತಿಸತೊಡಗಿರುತ್ತಾನೆ. ಸಮೀರ್‌ನನ್ನು ಮನೆಯಿಂದ ಗಡೀಪಾರು ಮಾಡಲಾಗುತ್ತದೆ. ನಂದಿನ ಕುಟುಂಬಕ್ಕೆ ಅವಮಾನ ತಂದಿದ್ದಾಳೆಂದು ನಂಬಿ ಪಂಡಿತನು ಹಾಡುವುದನ್ನು ಬಿಟ್ಟುಬಿಡುತ್ತಾನೆ. ಮತ್ತೆಂದೂ ನಂದಿನಿಯನ್ನು ಭೇಟಿಯಾಗಬಾರದೆಂದು ಸಮೀರ್‌ನನ್ನು ಕೇಳಿಕೊಳ್ಳಲಾಗುತ್ತದೆ. ಅವನು ಅಂತಿಮವಾಗಿ ಇಟಲಿಗೆ ಹೊರಟುಹೋಗುತ್ತಾನಾದರೂ, ತನ್ನ ಬಳಿ ಬರುವಂತೆ ಅವನು ನಂದಿನಿಗೆ ಪತ್ರಗಳನ್ನು ಬರೆಯುತ್ತಾನೆ. ಆದರೆ ಅವನ ಪತ್ರಗಳು ಅವಳನ್ನು ತಲುಪುವುದಿಲ್ಲ. ಒಂದು ವಿಫಲವಾದ ಆತ್ಮಹತ್ಯಾ ಪ್ರಯತ್ನದ ಬಳಿಕ, ನಂದಿನಿ ಮನಸ್ಸಿಲ್ಲದೆ ವನ್‍ರಾಜ್‍ನನ್ನು ವಿವಾಹವಾಗುತ್ತಾಳೆ. ತಮ್ಮ ವಿವಾಹದ ಮೊದಲ ರಾತ್ರಿಯಂದು ಅವನು ತಮ್ಮ ವಿವಾಹವನ್ನು ಪ್ರಸ್ತಕಾರ್ಯದಿಂದ ನೆರವೇರಿಸಲು ಪ್ರಯತ್ನಿಸಿದಾಗ, ನಂದಿನಿಯು ಅವನ ಸಾಮೀಪ್ಯದಿಂದ ಅಸಹ್ಯವಾಗಿ ಅವನ ಬಗ್ಗೆ ಅನಾದರದಿಂದ ನಡೆದುಕೊಳ್ಳುತ್ತಾಳೆ. ಅವನು ಅವಳನ್ನು ವಿವರಣೆಗಾಗಿ ಕೇಳುತ್ತಾನೆ ಆದರೆ ಅವಳು ಸುಮ್ಮನಿರಲು ಇಷ್ಟಪಡುತ್ತಾಳೆ. ಅಂತಿಮವಾಗಿ ನಂದಿನಿ ಸಮೀರ್‌ನ ಪತ್ರಗಳನ್ನು ಸ್ವೀಕರಿಸುತ್ತಾಳೆ ಮತ್ತು ಅವನ್ನು ಓದುವಾಗ ವನ್‍ರಾಜ್ ಒಳಗೆ ಬರುತ್ತಾನೆ. ಅವನಿಗೆ ಕೋಪಬಂದು ಆರಂಭದಲ್ಲಿ ಅವಳನ್ನು ಅವಳ ಹೆತ್ತವರಿಗೆ ಹಿಂದಿರುಗಿಸಲು ನಿರ್ಧರಿಸುತ್ತಾನೆ. ಅವಳು ಮತ್ತೊಬ್ಬನನ್ನು ಪ್ರೀತಿಸುತ್ತಿರುವುದರಿಂದ ಆ ಜೋಡಿಯನ್ನು ಒಂದುಮಾಡುವುದು ಸರಿಯಾದದ್ದು ಎಂದು ಶೀಘ್ರದಲ್ಲೇ ಅವನಿಗೆ ಅರಿವಾಗುತ್ತದೆ. ವನ್‍ರಾಜ್ ತನ್ನ ತಂದೆತಾಯಿಗಳ ಒಪ್ಪಿಗೆಯನ್ನು ಕೋರುತ್ತಾನೆ. ಅವರು ಮೊದಲು ಒಪ್ಪದಿದ್ದರೂ ಆಮೇಲೆ ಒಪ್ಪಿಗೆ ಕೊಡುತ್ತಾರೆ. ನಂದಿನಿ ಮತ್ತು ವನ್‍ರಾಜ್ ಇಟಲಿಗೆ ಆಗಮಿಸಿ ಸಮೀರ್‌ನ ಹುಡುಕಾಟದ ಪ್ರಯತ್ನದಲ್ಲಿ ವಿಫಲರಾಗುತ್ತಾರೆ. ತಮ್ಮ ಹುಡುಕಾಟದ ವೇಳೆ, ಅವರನ್ನು ಜನರು ಸುತ್ತುಗಟ್ಟಿದಾಗ ನಂದಿನಿ ತೋಳಿಗೆ ಗುಂಡು ತಗಲುತ್ತದೆ. ತನ್ನ ಬಗ್ಗೆ ವನ್‍ರಾಜ್‍ನ ದಯಾಪರತೆ ಮತ್ತು ಅಕ್ಕರೆಯಿಂದ ಅವಳಿಗೆ ಕನಿಕರ ಹುಟ್ಟಿ, ನಂದಿನಿ ಅವನೊಂದಿಗೆ ಸ್ನೇಹಪರಳಾಗಲು ಆರಂಭಿಸುತ್ತಾಳೆ. ಅಂತಿಮವಾಗಿ ಅವರು ಸಮೀರ್‌ನನ್ನು ಅವನ ತಾಯಿಯ (ಹೆಲೆನ್) ಮೂಲಕ ಪತ್ತೆಹಚ್ಚುತ್ತಾರೆ. ಸಮೀರ್‌ನ ಪ್ರಥಮ ಸಂಗೀತ ಕಾರ್ಯಕ್ರಮದ ರಾತ್ರಿಯಂದು ವನ್‍ರಾಜ್ ಕರ್ತವ್ಯಪರನಾಗಿ ಅವರಿಬ್ಬರ ಭೇಟಿಗಾಗಿ ಏರ್ಪಾಟು ಮಾಡುತ್ತಾನೆ. ನಂತರ ಅವನು ನಂದಿನಿಗೆ ವಿದಾಯ ಹೇಳಿ ಭಗ್ನಹೃದಯಿಯಾಗಿ ಹೊರಟು ಹೋಗುತ್ತಾನೆ. ಸಮೀರ್‌ನನ್ನು ಭೇಟಿಯಾದಾಗ, ಅವಳು ಅವನ ಕ್ಷಮೆ ಬೇಡಿ ತಾನು ವನ್‍ರಾಜ್‍ನನ್ನು ಪ್ರೀತಿಸುತ್ತಿದ್ದೇನೆಂದು ಹೇಳುತ್ತಾಳೆ. ತಮ್ಮ ಸಂಬಂಧದಾದ್ಯಂತ ವನ್‍ರಾಜ್ ತನ್ನ ಮೇಲೆ ತೋರಿಸಿದ ದೃಢವಾದ ಪ್ರೀತಿ ಮತ್ತು ನಿಷ್ಠೆಯ ಬಗ್ಗೆ ವಿಚಾರಮಾಡುತ್ತಾಳೆ, ಮತ್ತು ವನ್‍ರಾಜ್ ತನ್ನ ನಿಜವಾದ ಜೀವನಸಂಗಾತಿ ಎಂದು ಅವಳಿಗೆ ಅರಿವಾಗುತ್ತದೆ. ತಾನು ಬಹಳ ಹಿಂದೆ ಅವಳಲ್ಲಿ ತನಗಾಗಿ ನೋಡಿದ ಆ ಮಟ್ಟದ ಪ್ರೀತಿಯು ಈಗಿಲ್ಲ ಎಂದು ಸಮೀರ್‌ಗೆ ಅರಿವಾಗುತ್ತದೆ. ಭಗ್ನಹೃದಯಿಯಾಗಿ, ವನ್‍ರಾಜ್‍ನ ಬಳಿ ಹೋಗಲು ಸಮೀರ್ ಅವಳನ್ನು ಬಿಡುತ್ತಾನೆ. ಅದನ್ನು ಅವಳು ಕೂಡಲೇ ಒಪ್ಪಿಕೊಳ್ಳುತ್ತಾನೆ. ಅವಳು ಹೋದ ಮೇಲೆ ಸಮೀರ್ ಅಳಲು ಆರಂಭಿಸುತ್ತಾನೆ ಮತ್ತು ಅವನ ತಾಯಿಯು ಅವನನ್ನು ಸಮಾಧಾನಪಡಿಸುತ್ತಾಳೆ. ಅವಳು ವಾಪಸು ಅವನ ಬಳಿ ಓಡಿ ಹೋದಾಗ ತಾನು ಅವಳಿಲ್ಲದೆ ಬದುಕಲಾಗುವುದಿಲ್ಲ ಎಂದು ಅವನು ಹೇಳುತ್ತಾನೆ. ವನ್‍ರಾಜ್ ಅವಳ ಕುತ್ತಿಗೆಗೆ ಒಂದು ತಾಳಿಯನ್ನು ಕಟ್ಟುತ್ತಾನೆ ಮತ್ತು ಅವರು ಒಬ್ಬರನ್ನೊಬ್ಬರು ಆಲಿಂಗಿಸುತ್ತಾರೆ. == ಪಾತ್ರವರ್ಗ == ನಂದಿನಿ ಪಾತ್ರದಲ್ಲಿ ಐಶ್ವರ್ಯಾ ರೈ ಸಮೀರ್ ರಫ಼ಿಲಿನಿ ಪಾತ್ರದಲ್ಲಿ ಸಲ್ಮಾನ್ ಖಾನ್ ವನ್‍ರಾಜ್ ಪಾತ್ರದಲ್ಲಿ ಅಜಯ್ ದೇವ್‍ಗನ್ ಅಜ್ಜಿ ಪಾತ್ರದಲ್ಲಿ ಝೊಹ್ರಾ ಸೆಹೆಗಲ್ ಪಂಡಿತ್ ದರ್ಬಾರ್ ಪಾತ್ರದಲ್ಲಿ ವಿಕ್ರಮ್ ಗೋಖಲೆ ಅಮ್ರಿತಾ ಪಾತ್ರದಲ್ಲಿ ಸ್ಮಿತಾ ಜಯ್ಕರ್ ಕಾಮನಾ ಪಾತ್ರದಲ್ಲಿ ರೇಖಾ ರಾವ್ ಭೈರ್‍ಞೋ ಪಾತ್ರದಲ್ಲಿ ಕೆನಿ ದೇಸಾಯಿ ಅನುಪಮಾ ಪಾತ್ರದಲ್ಲಿ ಶೀಬಾ ಚಡ್ಢಾ ವನ್‍ರಾಜ್‍ನ ತಾಯಿಯಾಗಿ ಕಾನು ಗಿಲ್ ವಿಕ್ರಮ್‍ಜೀತ್ ಪಾತ್ರದಲ್ಲಿ ರಾಜೀವ್ ವರ್ಮಾ ತರುಣ್ ಪಾತ್ರದಲ್ಲಿ ವಿನಯ್ ಪಾಠಕ್ ಮಿಸಸ್ ರೋಸಲೀನ್ ಪಾತ್ರದಲ್ಲಿ ಹೆಲೆನ್ ಶಿಲ್ಪಾ ಪಾತ್ರದಲ್ಲಿ ಡಿಂಪಲ್ ಇನಾಮ್ದಾರ್ ಭರತ್ ಪಾತ್ರದಲ್ಲಿ ಆಕಾಶ್ ಕರ್ನಾಟಕಿ == ಡಿವಿಡಿ ಬಿಡುಗಡೆ == 2000ರಲ್ಲಿ, ಚಿತ್ರದ ಅಧಿಕೃತ ಡಿವಿಡಿ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == ಹಮ್ ದಿಲ್ ದೇ ಚುಕೇ ಸನಮ್ ಚಿತ್ರವನ್ನು ಬಹುತೇಕ ವಿಮರ್ಶಕರು ಉತ್ತಮವಾಗಿ ಸ್ವೀಕರಿಸಿದರು — ವಿಶೇಷವಾಗಿ ಅದರ ಭಾವನಾತ್ಮಕ ವಿಷಯವಸ್ತು, ಛಾಯಾಗ್ರಹಣ ಮತ್ತು ಸಂಗೀತವನ್ನು ಪ್ರಶಂಶಿಸಲಾಯಿತು — ಜೊತೆಗೆ ಮುಖ್ಯ ನಟರ ಅಭಿನಯಗಳನ್ನು ಮತ್ತು ಅತಿಥಿ ತಾರೆ ಹೆಲೆ‍ನ್‍ರ ಅನಿರೀಕ್ಷಿತ ಅಭಿನಯವನ್ನು ಪ್ರಶಂಸಿಸಲಾಯಿತು. ಹಮ್ ದಿಲ್ ದೇ ಚುಕೇ ಸನಮ್ ಬಾಕ್ಸ್ ಆಫ಼ಿಸ್‍ನಲ್ಲಿ ಹಿಟ್ ಎನಿಸಿಕೊಂಡಿತು, ಮತ್ತು ₹ 200 ದಶಲಕ್ಷದಷ್ಟು ಗಳಿಸಿ ೧೯೯೯ರ ಮೂರನೇ ಅತಿ ಹೆಚ್ಚು ಹಣಗಳಿಸಿದ ಬಾಲಿವುಡ್ ಚಿತ್ರವೆನಿಸಿಕೊಂಡಿತು. ವಿದೇಶದ ಬಾಕ್ಸ್ ಆಫ಼ಿ‍ಸ್‍ನಲ್ಲಿ ಈ ಚಿತ್ರವು ₹ 85 ದಶಲಕ್ಷದಷ್ಟು ಗಳಿಸಿತು. == ಧ್ವನಿವಾಹಿನಿ == ಧ್ವನಿವಾಹಿನಿಯ ಹಾಡುಗಳಿಗೆ ಸಾಹಿತ್ಯವನ್ನು ಮೆಹ್‍ಬೂಬ್ ಬರೆದಿದ್ದರು ಮತ್ತು ಸಂಗೀತವನ್ನು ಇಸ್ಮಾಯಿಲ್ ದರ್ಬಾರ್ ಸಂಯೋಜಿಸಿದ್ದರು. ಧ್ವನಿವಾಹಿನಿಯ ಧ್ವನಿಗಳಲ್ಲಿ ಕವಿತಾ ಕೃಷ್ಣಮೂರ್ತಿ, ಅಲ್ಕಾ ಯಾಗ್ನಿಕ್, ಕುಮಾರ್ ಸಾನು, ಉದಿತ್ ನಾರಾಯಣ್, ಹರಿಹರನ್, ವಿನೋದ್ ರಾಥೋಡ್, ಸುಲ್ತಾನ್ ಖಾನ್, ಶಂಕರ್ ಮಹಾದೇವನ್, ಕೆಕೆ ಮತ್ತು ಇತರರ ಧ್ವನಿಗಳು ಸೇರಿದ್ದವು. ಸಂಗೀತ ಮತ್ತು ಗಾಯನ ವರ್ಗಗಳಲ್ಲಿ ಈ ಚಿತ್ರವು ಒಂಭತ್ತು ಫಿಲ್ಮ್‌ಫೇರ್ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆಯಿತು ಮತ್ತು ಕೆಲವು ಗೆಲುವುಗಳನ್ನು ಕೂಡ ಸಾಧಿಸಿತು. === ಹಾಡುಗಳ ಪಟ್ಟಿ === == ಪ್ರಶಸ್ತಿಗಳು == ಗೆಲುವುಗಳು ೪೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಿರ್ಮಾಣ ವಿನ್ಯಾಸದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ನಿತಿನ್ ಚಂದ್ರಕಾಂತ್ ದೇಸಾಯಿ ಅತ್ಯುತ್ತಮ ಸಂಗೀತ ನಿರ್ದೇಶನದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಇಸ್ಮಾಯಿಲ್ ದರ್ಬಾರ್ ಅತ್ಯುತ್ತಮ ನೃತ್ಯ ನಿರ್ದೇಶನದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವೈಭವಿ ಮರ್ಚೆಂಟ್, ಅರ್ಶ್ ತನ್ನಾ, ಸಮೀರ್ ತನ್ನಾ ಅತ್ಯುತ್ತಮ ಛಾಯಾಗ್ರಹಣದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅನಿಲ್ ಮೆಹ್ತಾ ೪೫ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಚಲನಚಿತ್ರ - ಸಂಜಯ್ ಲೀಲಾ ಭನ್ಸಾಲಿ ಅತ್ಯುತ್ತಮ ನಿರ್ದೇಶಕ - ಸಂಜಯ್ ಲೀಲಾ ಭನ್ಸಾಲಿ ಅತ್ಯುತ್ತಮ ನಟಿ - ಐಶ್ವರ್ಯಾ ರೈ ಅತ್ಯುತ್ತಮ ಹಿನ್ನೆಲೆ ಗಾಯಕ - ಉದಿತ್ ನಾರಾಯಣ್ ("ಚಾಂದ್ ಛುಪಾ ಬಾದಲ್ ಮೇ") ಅತ್ಯುತ್ತಮ ನೃತ್ಯ ನಿರ್ದೇಶನ - ಸರೋಜ್ ಖಾನ್ ("ನಿಂಬೂಡಾ") ಅತ್ಯುತ್ತಮ ಹಿನ್ನೆಲೆ ಸಂಗೀತ - ಅಂಜನ್ ಬಿಸ್ವಾಸ್ ನಾಮನಿರ್ದೇಶನಗಳು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ - ಸಲ್ಮಾನ್ ಖಾನ್ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ - ಅಜಯ್ ದೇವ್‍ಗನ್ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == @ ಐ ಎಮ್ ಡಿ ಬಿ